ಸಂಗೀತ ಕ್ಷೇತ್ರದಲ್ಲಿ ಅದ್ಭುತವಾದ ಸಾಧನೆಯನ್ನು ಮಾಡಿದ ಸಂಗೀತ ಗಾರುಡಿಗ, ಗಾನಯೋಗಿ ಪಂಚಾಕ್ಷರ ಗವಾಯಿಗಳ ಮೆಚ್ಚಿನ ಶಿಷ್ಯ, ಮಹಾನ್ ಕವಿ ಪುಟ್ಟರಾಜ ಗವಾಯಿಗಳ ಜೀವನ ಚರಿತ್ರೆ ಆಧರಿಸಿ ನಿರ್ಮಾಣ ಮಾಡಿದಂಥ ಚಿತ್ರ ಶಿವಯೋಗಿ ಪುಟ್ಟಯ್ಯಜ್ಜ. ಉತ್ತರ ಕರ್ನಾಟಕದಲ್ಲಿ ಈ ಚಿತವ್ರು ಯಶಸ್ವಿಯಾಗಿ ೫೦ ದಿನಗಳನ್ನು ಪೂರೈಸಿ ಮುನ್ನಡೆಯುತ್ತಿದೆ. ಪಂಚಾಕ್ಷರ ಗವಾಯಿಗಳ ನಂತರ ಅವರ ಆದರ್ಶಗಳನ್ನು ಅನುಸರಿಸಿಕೊಂಡು ಬಂದ ಪುಟ್ಟರಾಜ ಕವಿಗಳ ಜೀವನ, ಸಾಧನೆ ಕುರಿತಾಗಿ ರಚಿತವಾದ ಈ ಚಿತ್ರವನ್ನು ದಿ.ಶ್ಯಾಮ್ ಮುಕುಂದ್ ನವುಲೆ ಅವರು ನಿರ್ಮಾಣ ಮಾಡಿದ್ದರು. ಹಿರಿಯ ಕಲಾವಿದ ದಿ|| ಉದಯ್ಕುಮಾರ್ ಅವರ ಮೊಮ್ಮಗಳು ಹಾಗೂ ದಿ.ಶಾಮ್ ಅವರ ಪತ್ನಿ ಹಂಸವಿಜೇತ ಈ ಚಿತ್ರದ ಸಾರಥ್ಯ ವಹಿಸಿಕೊಂಡಿದ್ದರು. ಚಿತ್ರ ಯಶಸ್ವೀ ಪ್ರದರ್ಶನ ಕಾಣುತ್ತಿರುವ ಸಂತಸದಲ್ಲಿರುವಾಗಲೇ ನಿರ್ಮಾಪಕ ಶಾಮ್ ಮುಕುಂದ್ ನವುಲೆ ಆಕಸ್ಮಿಕವಾಗಿ ಹೃದಯಾಘಾತದಿಂದ ನಿಧನ ಹೊಂದಿದ್ದರು.
ಗದಗದ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಈ ಚಿತ್ರದ ೫೦ನೇ ದಿನದ ಸಂಭ್ರಮಾಚರಣೆ ನಡೆದ ಸಂದರ್ಭದಲ್ಲಿ ನಿರ್ದೇಶಕಿ ಹಂಸವಿಜೇತ ಸೇರಿದಂತೆ ಸುಮಾರು ೫೦ ಜನ ಭಕ್ತರು ನೇತ್ರದಾನ ಮಾಡಿದರು. ಇದಕ್ಕೂ ಮುನ್ನ ಚಿತ್ರದ ನಾಯಕ ವಿಜಯಾ ರಾಘವೇಂದ್ರ ಅವರನ್ನು ಚಿತ್ರ ಪ್ರದರ್ಶನಗೊಳ್ಳುತ್ತಿರುವ ಗದಗಿನ ಕೃಷ್ಣಾ ಚಿತ್ರಮಂದಿರದವರೆಗೆ ಮೆರವಣಿಗೆ ಮೂಲಕ ಕರೆತರಲಾಯಿತು. ಸಮಾರಂಭದಲ್ಲಿ ನಿರ್ಮಾಪಕ ಶ್ಯಾಮ್ ಮುಕುಂದ್ ನವುಲೆ ಅವರು ಶ್ರೀಗಳ ಬಗ್ಗೆ ಯಾವರೀತಿ ಅಭಿಮಾನ, ಭಕ್ತಿ ಇಟ್ಟುಕೊಂಡಿದ್ದರು ಎಂಬುದನ್ನು ಸ್ಮರಿಸಿ ಅವರ ಆತ್ಮಕ್ಕೆ ಚಿರಶಾಂತಿ ಕೋರಲಾಯಿತು. ಪುಟ್ಟಯ್ಯಜ್ಜ ಅವರಲ್ಲಿದ್ದ ಅಗಾಧ ಸಂಗೀತ ಪ್ರತಿಭೆ ಇಡೀ ಜಗತ್ತಿಗೇ ಬೆಳಕು ನೀಡಿತ್ತು. ಅಂಥಾ ಮಹಾನ್ ಶಿವಯೋಗಿಯ ಪಾತ್ರದಲ್ಲಿ ನಟ ವಿಜಯ ರಾಘವೇಂದ್ರ ಅವರು ಅದ್ಭುತವಾದ ಅಭಿನಯ ನೀಡಿ ವೀಕ್ಷಕರ ಗಮನ ಸೆಳೆದಿದ್ದಾರೆ.